ಆಯ್ಕೆ
“ಅವನು..., ಆ ರಾಕ್ಷಸ ಬಂದು ನನ್ನ ಬದುಕನ್ನು ಸರ್ವನಾಶ ಮಾಡಿ ಹೋದ!”
“ಹೇಗೆ?”
“....”
“ಹೋದ ಅನ್ನುತ್ತಿದ್ದೀಯ....! ಇನ್ನೇನು ಚಿಂತೆ?”
“....”
“ಅವ ನಿನ್ನ ಜೀವನ ಸರ್ವನಾಶ ಮಾಡುವಾಗ ನೀನೇನು ಮಾಡುತ್ತಿದ್ದೆ? ನಿನಗದರ ಅರಿವಾಗುತ್ತಿರಲಿಲ್ಲವಾ? ಅದಕ್ಕೆ ಯಾಕೆ ಅವಕಾಶ ಕೊಟ್ಟೆ?”
“....”
“ನಿನ್ನ ಜೀವನ ಸರ್ವನಾಶ ಮಾಡಿದ ಅವನ ಬದುಕು ಹೇಗಿದೆ?”
“....”
“ಹೀಗೆ ಮೌನವಾಗಿದ್ದರೆ ಏನರ್ಥ? ಮಾತಾಡು!”
“ನಿನಗೆ ಅರ್ಥವಾಗುವುದಿಲ್ಲ!”
“ಸರಿ...! ಇಷ್ಟು ಮಾತ್ರ ಯಾವತ್ತಿಗೂ ನೆನಪಿಟ್ಟುಕೋ....! ನಮ್ಮ ಬದುಕಿಗೆ ಪರಿಪೂರ್ಣವಾಗಿ ನಾವೇ ಹೊಣೆಗಾರರು! ಯಾರೋ ಬಂದು ನಮ್ಮ ಬದುಕನ್ನು ಹಾಳುಮಾಡಿದರೆಂದೋ ನಾಶ ಮಾಡಿದರೆಂದೋ ಹೇಳುವುದರಷ್ಟುದೊಡ್ಡ ಮೂರ್ಖತನ ಬೇರೆಯಿಲ್ಲ. ಅದು ಆತ್ಮವಿಶ್ವಾಸವಿಲ್ಲದ..., ಕೈಯ್ಯಲ್ಲಾಗದ ಹೇಡಿಗಳು ಹೇಳುವ ಮಾತು! ಹಾಗೆಯೇ..., ಯಾರೋ ಬಂದು ನಮ್ಮನ್ನು ಉದ್ದಾರ ಮಾಡುತ್ತಾರೆಂದು ಕಾಯುತ್ತಾ ಕೂರುವುದೂ....! ಒಬ್ಬರನ್ನು ನಾವು ನಂಬಿದ್ದರಿಂದಾಗಿ..., ಒಬ್ಬರಿಗೆ ನಾವು ಕೊಟ್ಟ ಮಹತ್ವದಿಂದಾಗಿ- ಸ್ಥಾನದಿಂದಾಗಿ..., ಒಂದು ಹಂತದಲ್ಲಿ..., ನಮ್ಮ ಬದುಕಿನಲ್ಲಿ ಅಲ್ಪ ಸ್ವಲ್ಪ ಏರುಪೇರು ಉಂಟಾಗಬಹುದಾಗಲಿ..., ನಮ್ಮ ಪರಿಪೂರ್ಣ ಬದುಕನ್ನು ನಿರ್ಧರಿಸುವ ಅವಕಾಶ ನಮಗೆ ಮಾತ್ರ! ನಾವು ನೆಮ್ಮದಿಯಾಗಿರಬೇಕೋ ಬೇಡವೋ..., ಗೆಲ್ಲಬೇಕೋ ಬೇಡವೋ..., ಕೊನೆಗೆ ನಮ್ಮ ಬದುಕನ್ನು ನಿರ್ಧರಿಸುವ ಅವಕಾಶವನ್ನು ಇನ್ನೊಬ್ಬರಿಗೆ ಕೊಡಬೇಕೋ ಬೇಡವೋ ಅನ್ನುವುದು ಕೂಡ ನಮ್ಮದೇ ಆಯ್ಕೆ!” ಎಂದೆ.
ಅಷ್ಟೆ...., ಮತ್ತೆಂದೂ ನಾನವಳನ್ನು ಭೇಟಿಯಾಗುವ ಸಂದರ್ಭವೇ ಒದಗಲಿಲ್ಲ!
ನನ್ನನ್ನು- ವಾಸ್ತವವನ್ನು ಒಪ್ಪಬೇಕೋ ಬೇಡವೋ ಅನ್ನುವ ಆಯ್ಕೆ...,
ಅವಳದ್ದೇ!
ಇದೆ ಹೆಣ್ಣಿನ ಪಾತ್ರದಲ್ಲಿ ಒಬ್ಬ ಪುರುಷನ ಪಾತ್ರವಾಗಿ ಕಥೆ ಬರೆಯಿರಿ.. ಒಳ್ಳೆವನೋ ಕೆಟ್ಟವನೋ ಹೇಗೆ ಗೊತ್ತಾಗುತ್ತೆ ಮುಖವಾಡಗಳು ಧರಿಸಿದ ಪ್ರಪಂಚದಲ್ಲಿ.. ಯಾರೇ ಆದರೂ ಮೊದಲು ಒಬ್ಬ ಪುರುಷನನ್ನು ನಂಬಬೇಕು ಅಂತಾರೆ.. ನೋಡೋಣ ಸ್ವಲ್ಪ ದಿವಸ ಅಂದರೆ ಅವಳಿಗೆ ನನ್ನ ಮೇಲೆ ಸಂಶಯ ಅನುಮಾನ ನನ್ನ ನಂಬೋದೇ ಇಲ್ಲ ಅಂತ ಈಗಲೇ ಹೀಗೆ ಮುಂದೇ ಏನು ಅಂತ ಹಿಂದೆ ಹೋಗೋವರೆ ಜಾಸ್ತಿ. ತಂದೆ ತಾಯಿ ಮದುವೆ ಮಾಡಿದಾಗ ಆಯ್ಕೆ ಅವಳ ಕೈನಲ್ಲಿ ಇಲ್ಲದೆ ಇರುವಾಗ ಅವಳು ಏನು ಮಾಡಲು ಸಾಧ್ಯ. ಅವನೇನೋ ನಾಶ ಮಾಡಿ ಹೋಗ್ತಾನೇ ಮಕ್ಕಳ ಪರಿಸ್ಥಿತಿ ಏನು ಹಾಗೂ ಹೆಣ್ಣು ತನ್ನ ಮಕ್ಕಳನ್ನು ತಾಯಿ ಆಗಿ ತನ್ನ ಕರ್ತವ್ಯ ಮಾಡತಾಲೆ ಅವಳೇನು ಬಿಟ್ಟು ಕೊಡಲ್ಲ.. ನೀವು ಕಥೆ ಯಾವಾಗಲು ಒಂದು ಕಡೆ ಬರೀತೀರಾ ಇನ್ಮೇಲೆ ಕಥೆ ಎರಡು ಕಡೆ ಬರೀರಿ ಆಗಲೇ ಸತ್ಯಾ ಸತ್ಯತೆ ವಾಸ್ತವ ಏನು ಅಂತ ಗೊತ್ತಾಗೋದು... ಒಬ್ಬರನ್ನೇ ಯಾಕೆ ಎಲ್ಲದಕ್ಕೂ ಗುರಿಯಾಗಿಸುತ್ತಿರಿ..
ReplyDelete