Posts

ಓಂ!

 ಓಂ! * ಯಾರೂ ಹೇಳದ ಕಥೆಯೊಂದನ್ನು ಹೇಳುತ್ತೇನೆ. ಇದು ನಡೆದಿರುವುದು ದೇವರ ಕಾಡಿನಲ್ಲಿ. ದೇವರಲ್ಲಿ ಕಾಡೋ ಕಾಡಿನಲ್ಲಿ ದೇವರೋ…, ಒಟ್ಟು ಕಥೆ ನಡೆದದ್ದು ದೇವರ ಕಾಡಿನಲ್ಲಿ. ಸುಮಾರು ನೂರು ವರ್ಷ ಮುಂಚೆ ನಡೆದ ಘಟನೆ- ಈಗ ಕಥೆಯಾಗಿದೆ. ಆಗ ನನಗೆ ಹತ್ತು ವರ್ಷ ವಯಸ್ಸು. ಓಣಂ ಹಬ್ಬಕ್ಕೆ ಹೂ ಕೀಳಲು ಹೋಗಿದ್ದೆ. ಒಬ್ಬನೇ. ಅಷ್ಟೊಂದು ಧೈರ್ಯವಂತನೇನೂ ಅಲ್ಲ. ಆದರೂ ಹೆದರಿಕೆಯ ನೆನಪಿಲ್ಲದೆ ಹೂ ಕೀಳುತ್ತಿದ್ದೆ. ಹೆದರಿಕೆ ಅನ್ನುವುದು ಸುಮ್ಮನೆ ಬರುವುದಿಲ್ಲ. ಅದಕ್ಕೊಂದು ಕಾರಣವೋ ಏನಾದರೂ ನೆನಪೋ ಉಂಟಾಗಬೇಕು! ಅದೆರಡೂ ಇಲ್ಲದೆ ಹೂ ಕೀಳುತ್ತಿದ್ದವನಿಗೆ ಆಕಸ್ಮಿಕವಾಗಿ ಆಕಳಿಕೆ ಬಂತು. ನನ್ನರಿವಿಲ್ಲದೆ ಕಣ್ಣು ಮುಚ್ಚಿಕೊಂಡವನಿಗೆ ಗಾಢ ನಿದ್ರೆ. ನಿದ್ರೆಯಲ್ಲೇನು ಕನಸು ಗೊತ್ತೇ…? ಅನಂತಶಯನ- ವಿಷ್ಣು. ನಿದ್ದೆ ಗಾಢವೇ ಆದರೂ ಕಾಣುತ್ತಿರುವುದು ಕನಸು ಅನ್ನುವ ಅರಿವು! ಪ್ರಶ್ನೆ…! ಛೇ…, ನನಗೇಕೆ ವಿಷ್ಣು ಕನಸಿನಲ್ಲಿ ಬರಬೇಕು? ನಾನು ಶಿವಭಕ್ತನಲ್ಲವಾ? ನಿಜವೇ…, ನಾನು ಹೇಗೆ ಶಿವಭಕ್ತನಾದೆ? ಅಂಡಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ ಅನ್ನುವುದು ಒಂದುಕಡೆ, ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಅನ್ನುವುದು ಮತ್ತೊಂದುಕಡೆ! ಮತ್ತೆ ವ್ಯತ್ಯಾಸವೇನು? ಹೇಗೆ? ಆ ವಯಸ್ಸಿನಲ್ಲೇ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನೂ, ದೇವೀಭಾಗವತವನ್ನೂ ಓದಿದವನಿಗೊಂದು ಭಯಂಕರ ಗೊಂದಲವಿತ್ತು. ಕೋಪ ಬರುವ ಹಾಗಿದ್ದರೆ ದೇವರೇಕೆ ದೇವರು? ಪಾರ್ವತಿದೇವಿಗೆ ಅಸೂಯೆಯಾಗುತ್ತದೆ, ಲಕ್ಷ್ಮಿದ...

ಬೆಟ್ಟದಲ್ಲಿ ಸಿಕ್ಕವ!

 ಬೆಟ್ಟದಲ್ಲಿ ಸಿಕ್ಕವ! * ಕೆಲವೊಂದು ಪರಿಚಯಗಳು ತೀರಾ ಆಕಸ್ಮಿಕ ಮತ್ತು ತುಂಬಾ ಕುತೂಹಲಕಾರಿಯಾಗಿರುತ್ತದೆ. ಅಷ್ಟು ವರ್ಷದಿಂದ ಬೆಟ್ಟ ಹತ್ತುತ್ತಿದ್ದೇನೆ. ಕೆಲವರು ಪರಿಚಯವೇ ಆಗುವುದಿಲ್ಲ. ಪರಸ್ಪರ ನೋಡಿದರೂ ಪ್ರತಿದಿನ ಅಪರಿಚಿತರಂತೆಯೇ ಇರುತ್ತೇವೆ. ಕೆಲವರು ಮುಗುಳುನಗುವಿಗೆ ಸೀಮಿತ. ಕೆಲವರು ಹಾಯ್ ಹೇಳಿ ಸುಮ್ಮನಾಗುತ್ತಾರೆ. ಕೆಲವೇ ಕೆಲವರು ಮಾತ್ರ…, ಎಲ್ಲಿ ಎರಡುಮೂರು ದಿನದಿಂದ ಕಾಣಿಸಲಿಲ್ಲ ಅಂತಾನೋ…, ಎಷ್ಟು ದಿನದಿಂದ ಹತ್ತುತ್ತಿದ್ದೀರಿ ಅಂತಾನೋ…, ಪ್ರತಿದಿನ ನೋಡ್ತೀನಿ ನೀವು ತುಂಬಾ ಸ್ಪೀಡ್ ಆದ್ದರಿಂದ ಮಾತನಾಡಿಸಲು ಸಾಧ್ಯವಾಗಿರಲಿಲ್ಲ ಅಂತಾನೋ ಮಾತಿಗೆ ಶುರುವಿಡುತ್ತಾರೆ. ನಾನಾಗಿ ನಾನಂತೂ ಯಾರೊಬ್ಬರನ್ನೂ ಮಾತನಾಡಿಸಿದವನಲ್ಲ. ನಿಜ ಹೇಳಬೇಕೆಂದರೆ ಯಾರನ್ನಾದರೂ ಗಮನಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ. ಟಕಟಕನೆ ಹತ್ತಿ ಟುಪುಟುಪು ಇಳಿದು ಹೋಗುವುದಷ್ಟೆ! ಆದರೆ ಸ್ವಲ್ಪ ದಿನದಿಂದ ಆ ಇಬ್ಬರು ಹುಡುಗರು ನನ್ನ ಗಮನವನ್ನು ಸೆಳೆದಿದ್ದಾರೆ. ನಾನು ಆಶ್ರಮದಬಳಿ ಗಾಡಿನಿಲ್ಲಿಸಿ ಹತ್ತು ನಿಮಿಷದ ವಾರ್ಮಪ್ ಶುರುಮಾಡುವ ಸಮಯಕ್ಕೆ ಸರಿಯಾಗಿ ನನ್ನನ್ನು ದಾಟಿ ಹೋಗುತ್ತಾರೆ- ಗಾಡಿಯಲ್ಲಿ. ಅವರು ಗಾಡಿಯನ್ನು ನಿಲ್ಲಿಸುವುದು ಮೆಟ್ಟಿಲು ಶುರುವಾಗುವ ಜಾಗದಲ್ಲಿ. ನಾನು ಗಾಡಿ ನಿಲ್ಲಿಸುವ ಜಾಗದಿಂದ ಇನ್ನೂರು ಮುನ್ನೂರು ಮೀಟರ್ ದೂರದಲ್ಲಿ- ಬೆಟ್ಟಕ್ಕೆ ಹತ್ತಿರವಾಗಿ. ಅದರಲ್ಲಿ ಹಿಂದೆ ಕುಳಿತಿರುವವನ ರೀತಿ ನೋಡಿದರೆ ಅವರಿಬ್ಬರು ಗಂಡು ಜೋಡಿಗಳೇನೋ...

ತಣ್ಣನೆಯ ಕ್ರೌರ್ಯ!

  ತಣ್ಣನೆಯ ಕ್ರೌರ್ಯ ! * ಅವಳೊಂದು ನೆರಳು . ನನ್ನರಿವಿಲ್ಲದೆಯೇ ನನ್ನೊಂದಿಗಿರುವ ನೆರಳು . ಪ್ರತಿಕ್ಷಣದ ಅವಳ ಪ್ರಾರ್ಥನೆಯೇ ನನ್ನ ಸಂರಕ್ಷಣೆ . ಅವಳ ಪ್ರೇಮವಿಲ್ಲದಿದ್ದರೆ ನಾನಿಲ್ಲ ! ಬದಲಾಗಿ ಅವಳಿಗೆ ನಾನು ಕೊಡುತ್ತಿರುವುದು ಏನು ? ನೋವು… ! ಅದೊಂದು ವಿಚಿತ್ರ ಅನುಭೂತಿ ನನಗೆ ! ಆ ಅನುಭೂತಿಯಿಂದ ನಾನು ಹೊರಬರಬೇಕಿತ್ತು… , ನನಗಾಗಿ ತಪಿಸುವ ..., ನನ್ನ ಕಥೆಗಳಿಗಾಗಿ ತಪಿಸುವ… , ಅವಳೆಂಬ ಅನುಭೂತಿಯಿಂದ ನಾನು ಹೊರಬರಬೇಕಿತ್ತು ! ನಿಜವೇ… , ನಾನು ಬರೆಯದಿದ್ದರೆ ತಪಿಸುವುದು ಅವಳು ಮಾತ್ರ . ನನ್ನಿಂದ ಒಂದು ಕಥೆ ಬರೆಸಲು ಏನೆಲ್ಲಾ ಕಸರತ್ತು ಮಾಡುತ್ತಾಳೆ… , ಪಾಪ ! ಸದ್ಯಕ್ಕೆ… , ಪೀಠಿಕೆಯೊಂದನ್ನು ಹಾಕಿದ್ದಾಳೆ . ಆ ಪೀಠಿಕೆಯಲ್ಲಿ… , ನನ್ನೆಡೆಗಿನ ಅವಳ ಪ್ರೇಮವೂ ಅವಳೆಡೆಗಿನ ನನ್ನ ತಾತ್ಸರವೂ ಇದೆ ! ಆದರದು ಉದ್ದೇಶಪೂರ್ವಕ ಹೇಳಿದ್ದಲ್ಲ ! ಅವಳರಿವಿಲ್ಲದೆ ಅವಳೊಳಗಿನ ನೋವು ಹೊರಬಂದಿದೆ . ಆ ನೋವಿಗೆ ಕಾರಣ ನಾನೇ - ಗೊತ್ತು ! ಕೆಲವೊಮ್ಮೆ ಹಾಗೆಯೇ… , ಯಾವ ಪ್ರಯತ್ನವೂ ಇಲ್ಲದೆ ನಮಗೆ ದೊರಕುವ ಪ್ರೇಮ , ವಾತ್ಸಲ್ಯ , ಕಾಳಜಿಗಳ ಮಹತ್ವ… , ನಮಗೆ ಅರಿವಾಗುವುದೇ ಇಲ್ಲ . ಅರಿತರೂ… , ತಾತ್ಸರ ! ಅದನ್ನು ಮರಳಿ ಕೊಡಲಾಗದಿದ್ದರೂ… , ನಮ್ಮಬಗ್ಗೆ ಅವರ ಮನಸ್ಸಿನಲ್ಲಿರುವ ಭಾವಕ್ಕೆ ಗೌರವವನ್ನಾದರೂ ಕೊಡಲು ಕಲಿಯಬೇಕು ! ನನಗದು ಆಗುವುದಿಲ್ಲ ! * “ ಓಯ್ !” ಎಂದೆ . “ ನ್ತ ?” ಎಂದ . ...

ಕನಸಿನರ್ಥ!

  ಬೆಳ್ಳಂ ಬೆಳಗ್ಗೆ ಒಂದು ಕನಸು ಮಾರ್ರೆ ! ಒಳ್ಳೆಯದ್ದೋ ಕೆಟ್ಟದ್ದೋ ತಿಳಿಯದ ಕನಸು ! ಕನಸಿನಲ್ಲಿ… , ನಾನು - ಸುತ್ತಲೂ ಗುಡ್ಡಗಳಿದ್ದು , ಕುರುಚಲು ಕಾಡಿನ ಮಧ್ಯೆ ಏಕಾಂತವಾಗಿದ್ದ ಒಂದು ಪಾಳು ಕಟ್ಟಡದ ಬಳಿ ಇದ್ದೆ . ಒಂದು ಗಂಡು ಒಂದು ಹೆಣ್ಣು… , ಗಂಡ - ಹೆಂಡತಿಯರಿರಬೇಕು ! ತಮ್ಮ ಪಾಪುವಿನೊಂದಿಗೆ ನನ್ನ ಸಹಾಯಕ್ಕೆ ಬಂದಿದ್ದರು . ಏನು ಸಹಾಯ ಅಂದರೆ ತಿಳಿಯದು ! ಇದ್ದಕ್ಕಿದ್ದಂತೆ ಹೆಂಡತಿ ಪಾಪುವನ್ನು ಎದೆಗೊತ್ತಿಕೊಂಡು ಅಳತೊಡಗಿದಳು ! ಏನಾಯಿತು ಏನಾಯಿತು ಎಂದು ನೋಡುತ್ತಾ ಗಂಡನೂ ಅಳತೊಡಗಿದ . ಪಾಪು ಸತ್ತಿತ್ತು !! ನನಗೋ ಎದೆಭಾರವಾಗಿ ಗಂಟಲು ಕಟ್ಟಿ ದುಃಖಭಾರದಿಂದ… , “ ಅಯ್ಯೋ… , ನನಗಾಗಿ ಬಂದ ಇವರಿಗೆ ಹೀಗಾಯಿತೇ… ! ದೇವರು ಅನ್ನುವವನಿದ್ದರೆ ನನ್ನ ಜೀವವನ್ನು ಅದಕ್ಕೆ ನೀಡಿ ಬದುಕಿಸಲಿ !” ಎಂದು ಹೃದಯದಿಂದ ರೋಧಿಸಿದೆ . ಕಣ್ಣು ಮಂಜಾಯಿತು ! ಇದ್ದಕ್ಕಿದ್ದಂತೆ ಮೋಡ ಕಟ್ಟಿ ನಡು ಮಧ್ಯಾಹ್ನದ ಸಮಯ ಸಂಜೆಯಂತಾಯಿತು ! ಧಾರಾಕಾರ ಮಳೆ ! ಕಣ್ಣು ಕುರುಡಾಗಿ ಕತ್ತಲು ಅನ್ನಿಸಿತೋ ನಿಜವಾದ ಕತ್ತಲಾದ್ದರಿಂದ ಕಣ್ಣು ಕಾಣಿಸಲಿಲ್ಲವೋ… , ಮುಂದಕ್ಕೆ ಹೆಜ್ಜೆ ಹಾಕಿದವ ದೊಪ್ಪನೆ ಕೆಳಕ್ಕೆ ಬಿದ್ದೆ ! ಮಗುವಿನ ಅಳುವಿನ ಶಬ್ದ !! ಅಷ್ಟೆ ಕನಸು ! ಮಗುವಿನ ಅಳುವಿನ ಶಬ್ದ ಅಲರಾಂ ! ಎಚ್ಚರಗೊಂಡೆ ! ಯಾಕೋ ಕನಸಿಗೆ ಅರ್ಥ ಹುಡುಕಬೇಕು ಅನ್ನಿಸಲಿಲ್ಲ !!!

ಬೆಟ್ಟ!

  ಬೆಟ್ಟ ! * ಸುಮಾರು ಎರಡು ವಾರದ ನಂತರ ಬೆಟ್ಟಕ್ಕೆ ಹೋಗುತ್ತಿದ್ದೇನೆ . ಎಂದಿನಂತೆ ಆಶ್ರಮದ ಗೇಟಿನ ಮುಂದೆ ( ಪ್ರತಿದಿನ ನಾನು ಗಾಡಿ ಪಾರ್ಕ್ ಮಾಡುವುದು ಅಲ್ಲಿಯೇ !) ಗಾಡಿ ನಿಲ್ಲಿಸಿ ಸ್ಟ್ಯಾಂಡ್ ಹಾಕುವಾಗ… , “ ಏನ್‌ಸಾರ್ ಸ್ವಲ್ಪದಿನ ಕಾಣಲಿಲ್ಲ ?” ಎಂದರು ಕಂಬಳಿ ಹೊದ್ದು ಛೇರ್‌ನಲ್ಲಿ ಮುದುಡಿ ಕುಳಿತಿದ್ದ ನೈಟ್ ವಾಚ್‌ಮನ್ - ಆಕಳಿಸುತ್ತಾ ! “ ಒಂದು ಟೂರ್ ಹೋಗಿದ್ದೆ… , ಒಬ್ಬನೇ ! ಜೊತೆಗೆ ಸೋಮಾರಿತನ !” ಎಂದು ನಕ್ಕೆ . “ ನಾನೇಲ್ಲೋ ಹುಷಾರಿಲ್ಲವೇನೋ ಅಂದುಕೊಂಡೆ… , ಚೆನ್ನಾಗಿದ್ದೀರ ತಾನೆ ?” ಎಂದರು . “ ಆರಾಮಾಗಿದ್ದೀನಿ… , ನೀವು ಹೇಗಿದ್ದೀರ ? ಎಲ್ಲಿ ಇನ್ನೊಬ್ಬರು ?” ಎಂದು ವಿಚಾರಿಸಿದೆ . “ ಅವರು ರಜ ಸಾರ್… , ಮೂರು ದಿನದಿಂದ ಒಬ್ಬನೇ !” ಎಂದರು . “ ಹೆದರಿಕೆ ಆಗಲ್ವಾ ?” ಎಂದೆ . “ ಎಂತ ಹೆದರಿಕೆ ಸಾರ್… , ಆಶ್ರಮ !” ಎಂದರು . ಮುಗುಳುನಕ್ಕು… , “ ಸರಿ ಹೋಗಿ ಬರ್ತೀನಿ… !” ಎಂದು ಹೊರಟೆ . ಅವರೂ ಮೈಮುರಿಯುತ್ತಾ ಛೇರ್‌ನಿಂದ ಎದ್ದು… , “ ಸಾರ್ ...” ಎನ್ನುತ್ತಾ ಕಂಬಳಿಯನ್ನು ಸರಿಸಿ ಹತ್ತಿರಕ್ಕೆ ಬಂದು… , “ ಜೋಪಾನ ಸರ್… , ಮೊನ್ನೆಮೊನ್ನೆ ಬೆಟ್ಟದಲ್ಲಿ ಒಂದು ಮರ್ಡರ್ ಆಗಿದೆ ! ಜೊತೆಗೆ ಎರಡು ದಿನದಿಂದ ಚಿರತೆ ಇದೆ ಅಂತ ನ್ಯೂಸು !” ಎಂದರು . ಎದೆ ಧಗ್ ಅಂದಿತಾ ? ಆದರೂ ಅವರ ಮುಖವನ್ನು ನೋಡಿ ಮುಗುಳುನಕ್ಕು… , “ ಪ್ರಾಣದ ಮೇಲಿನ ಆಸೆಯನ್ನು ಯಾವತ್ತೋ ಬಿಟ್ಟಿದ್ದೀನಿ ! ಸೊ ಹೆದರ...

ಮಹಾಕಾವ್ಯ

 "ಹೇಗಿದೀಯ.., ಇವತ್ತು?" ಎಂದು ಕೇಳಿದೆ. "ಚೆನ್ನಾಗಿಲ್ಲ!" ಎಂದಳು. "ನಿನ್ನೆ 90% ಚೆನ್ನಾಗಿದ್ದೆ? ಇವತ್ತು 100% ಚೆನ್ನಾಗಿರಬೇಕಲ್ಲವಾ...? ಚೆನ್ನಾಗಿಲ್ಲದಿರುವುದು.., ಮನಸ್ಸೋ..., ಶರೀರವೋ?" ಎಂದೆ. "ಎರಡೂ!" ಎಂದಳು. "ಈಗ ನಾ ಏನು ಹೇಳಬೇಕು?" "ಏನಾದರೂ ಹೇಳು!" "ಮನಸ್ಸು ನಿರಾಳವಾಗಲು..., ನೀನೇ; ಒಂದು ಕವಿತೆ ಬರಿ-ಅದೇ..., ದೇಹವನ್ನೂ ಹಗುರಗೊಳಿಸುತ್ತದೆ!" ಎಂದೆ. "ನೀನೇ ಬರಿಪ್ಲೀಸ್!!" ಎಂದಳು. ಹೇಳಿದ್ದು ಅವಳಾದ್ದರಿಂದ ಎದೆ ಧಗ್ ಎಂದಿತು! "ನಾ ಕವಿಯಲ್ಲ" ಎಂದೆ. "ಮತ್ತೇ..., ನಾ ನಿನ್ನ ಕವಿತೆ ಅನ್ನುತ್ತಿದ್ದೆ?" ಅಂದಳು! ಉಸಿರು ಸಿಕ್ಕಿಕೊಂಡಿತು! "ನಿನಗಿಂತ ಸಮರ್ಥವಾಗಿ ಪದಗಳನ್ನು ಬಳಸುವವರಾರು? ನಿನ್ನದೇ ಪದಗಳನ್ನು ತಿರಿಚುತ್ತೇನೆ!" ಎಂದೆ. ಅವಳು ಮೌನ! * ಒಲವು ಮೂಡಿದ್ದು ಅರಿತುಕೊಂಡೆಯಲ್ಲ- ಧನ್ಯ!!  ನ-ನ್ನಿಂ-ದ...., ಎಷ್ಟೊಂದು ನವಿರು ಪದಗಳು- ನಿನ್ನ ಕಾರಣವಾಗಿ! ನನ್ನೆದೆಯ ನೀನೆಂಬ ಕವಿತೆಯ ಪದಗಳಾಗಲು ಪ್ರತಿದಿನ ಸಂಜೆ ತವಕದಿಂದ ಕಾಯುತ್ತಿದ್ದೀಯೆನ್ನುವ ಅರಿವು ನನ್ನಹಂಕಾರ! ಒಲಿದ ಒಲವು ಕವಿತೆ ಕಟ್ಟುವ ಕಸುವಾಗಿ ಪ್ರತಿ ಕ್ಷಣ ನಿನ್ನ ಧ್ಯಾನದಲಿ ಹಡೆದ ಪದಗಳೆಲ್ಲಾ ಕವಿತೆಗಳಾಗಿ ನೀ ನಿರಾಳವಾಗುವುದಾದರೆ..., ಅದೇ..., ನನ್ನನ್ನೂ ಬದುಕಿಸಲಿ! ನಿನ್ನ ಕಾರಣವಾಗಿ ನನ್ನಲ್ಲಿ ಹುಟ್ಟಿ...

ಧೈರ್ಯ(ದೆವ್ವ!)ಪರೀಕ್ಷೆ!

  ಧೈರ್ಯ ( ದೆವ್ವ !) ಪರೀಕ್ಷೆ ! * ಬೆಂಗಳೂರಿನಿಂದ ಹೊರಟಿದ್ದು ತಡವಾಗಿತ್ತು ! ಮೈಸೂರು ಬಸ್‌ಸ್ಟ್ಯಾಂಡ್ ತಲುಪಿದಾಗ ರಾತ್ರಿ ಹನ್ನೊಂದೂವರೆ ! ಬಸ್‌ಸ್ಟ್ಯಾಂಡ್‌ನಿಂದ ಹೊರಬಂದಾಗ ಸಿಟಿ ಬಸ್‌ - ನಂಬರ್ 164 ಕಾಣಿಸಿತು ! ಗೌಸಿಯಾ ನಗರ್‌ವರೆಗೆ ಹೋಗಬಹುದು ! ಮೈಸೂರು ತಲುಪುವ ಸಮಯವನ್ನು ಲೆಕ್ಕ ಹಾಕಿದಾಗಲೇ ಅಂದುಕೊಂಡಿದ್ದೆ… , ಇವತ್ತು ಮನೆಗೆ ಆ ಸ್ಮಶಾನದ ಕಡೆಯಿಂದಲೇ ಹೋಗಬೇಕೆಂದು ! ಇಪ್ಪತ್ತು ವರ್ಷಮುಂಚೆ ಧೈರ್ಯಪರೀಕ್ಷೆ ನಡೆಸಿದ ಸ್ಮಶಾನ ! ಕೆಲವೊಂದು ನೆನಪುಗಳು ಹಾಗೆಯೇ… , ಅಷ್ಟು ಸುಲಭದಲ್ಲಿ ಮಾಸುವುದಿಲ್ಲ ! ಬಸ್‌ಸ್ಟ್ಯಾಂಡ್‌ನಿಂದಲೇ ನಡೆದು ಹೋಗಬೇಕಾಗಬಹುದು ಅಂದುಕೊಂಡರೂ ಈ ಬಸ್‌ ಕಾಣಿಸಿದ್ದು ಖುಷಿಯಾಯಿತು - ಅರ್ಧ ದೂರದ ನಡಿಗೆ ತಪ್ಪಿತು ! ಮುಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ಓಡಿಬಂದು ಹತ್ತಿ ಕುಳಿತೆ . ಪಕ್ಕದಲ್ಲಿ ಹದಿನಾರು - ಹದಿನೇಳು ವರ್ಷದ ಹುಡುಗನೊಬ್ಬ ಬಿಳುಚಿಕೊಂಡವನಂತೆ ಕುಳಿತಿದ್ದ . ಒಬ್ಬನೇ ಹೋಗುತ್ತಿರುವುದರ ಹೆದರಿಕೆಯಿರಬೇಕು ! ಹೆದರಿಕೆ ! ಆ ವಯಸ್ಸಿನಲ್ಲಿಯೇ ನಾನು ನನ್ನ ಧೈರ್ಯಪರೀಕ್ಷೆ ಮಾಡಲು ಮಧ್ಯ ರಾತ್ರಿಯಲ್ಲಿ ಸ್ಮಶಾನದ ಮೂಲಕ ಹಾದು ಹೋಗಿದ್ದು ! ನನ್ನ ಮುಗುಳುನಗು ಅವನು ಸ್ವಲ್ಪ ರಿಲಾಕ್ಸ್ ಆಗುವಂತೆ ಮಾಡಿತು . ಒಂದೆರಡು ಕ್ಷಣ ನನ್ನ ಮುಖವನ್ನೇ ನೋಡಿದ ಅವನ ಮುಖದಲ್ಲಿ ಆಶ್ಚರ್ಯ ! “ ನೀವು ದೇವೀಪುತ್ರನಲ್ಲವೇ ? ಕಥೆಗಾರ ? ನಮ್ಮಮ್ಮ ಫೇಸ್‌ಬುಕ್‌ನಲ್ಲಿ ನಿಮ್ಮ ಫ್ರೆಂಡ...

ಅವಳೆಂಬ ನಂಬಿಕೆ!

ಅವಳೆಂಬ ನಂಬಿಕೆ ! ೧ ಗೋವಾಬೀಚಿನಲ್ಲಿ ಒಂದೇ ಸಮನೆ… , ಯಾವುದೇ ಉದ್ದೇಶವಿಲ್ಲದೆ ಸುತ್ತುತ್ತಿದ್ದೆ - ಕಳೆದೆರಡು ದಿನಗಳಿಂದ . ಒತ್ತಡದ ದಿನಚರಿಯಿಂದ ದೂರ ಹೋಗಿ ಒಂದು ವಾರ ಯಾರ ಸಂಪರ್ಕವೂ ಇಲ್ಲದೆ ನೆಮ್ಮದಿಯಿಂದ ನನ್ನೊಳಗೆ ನಾನಾಗಿ ಕಳೆಯಬೇಕೆಂಬ ಹಂಬಲ . ಅಮ್ಮನಿಗೂ ಎಲ್ಲಿಗೆ ಹೋಗುತ್ತಿದ್ದೇನೆಂದು ಹೇಳಿರಲಿಲ್ಲ . ಇಂತಾ ಕಡೆಗೆ ಎಂದು ನಾನೂ ತೀರ್ಮಾನಿಸಿರಲಿಲ್ಲ . ಟೀ ಬೇಕು ಅನಿಸುವಂತೆ - ಅವಳ ನೆನಪುಗಳು ! ಟೈಂಟುಟೈಂ ತಿಂಡಿ - ಊಟ… , ಅಂತೆಲ್ಲ ನೆನಪು ಮಾಡಿ ವಿಚಾರಿಸೋದು… , ಮೆಸಂಜರ್‌ನಲ್ಲಿ ಟಿ ಕಳಿಸುತ್ತಾ ಇದ್ದಿದ್ದು… , ಹೀಗೆ ಹೀಗೆ… , ಮನಸ್ಸಿನಲ್ಲಿ ಏನೋ ಹೇಳಲಾರದ ಭಾವೋದ್ವೇಗ ! ಕಾಲೆಳೆದತ್ತ ಹೋದಾಗ ಎದುರಾಗಿದ್ದು ಟೀ ಶಾಪ್… , ಅಲ್ಲಿ ಅದೇ ಅವಳು - ಹತ್ತು ವರ್ಷಗಳ ನಂತರ… ! “ ಹೀಗೆ… , ಸಮುದ್ರದ ಅಲೆಗಳ ಮೊದಲ ಪ್ಯಾರ ಟಿಪಿಕಲ್ ಭದ್ರನ ಸ್ಟೈಲ್‌ಲಿ ಬರಿ ! ಕ್ಲೈಮಾಕ್ಸ್ ನಾನು ಹೇಳುತ್ತೇನೆ !” ಎಂದಳು . “ ಬೇಡ !” ಎಂದೆ . * ಇದು ಹೀಗೆಯೇ… ! ನನ್ನೊಳಗಿನ ಕಥೆಗಾರನ ಕಥೆ ! ಅಕ್ಷರಗಳು ಪದಗಳಾಗಿ , ಪದಗಳು ವಾಕ್ಯಗಳಾಗಿ , ವಾಕ್ಯಗಳು ಘಟನೆಗಳಾಗಿ , ಘಟನೆಗಳೇ ಭಾವಗಳಾಗಿ… ! ನಾನೇ ಬರೆಯಬಾರದೆಂದುಕೊಂಡರೂ ಸಾಧ್ಯವಿಲ್ಲದಷ್ಟು ನನ್ನೊಳಗಿನ ಕಥೆಗಾರ ನನ್ನನ್ನು ಮೀರಿ ಹೋಗಿದ್ದಾನೆ ! ಕಾರಣ… , ಅವಳು - ಅವಳೆಂಬ ನಂಬಿಕೆ ! ಇನ್ನುಮುಂದೆ ಕಥೆಗಳನ್ನು ಬರೆಯುವುದಿಲ್ಲವೇ ಅಂದೆ - ಅಷ್ಟೆ ...! ಸ್ವಲ್ಪ ದಿನಕ್ಕೆ ಏನ...

ಕವಿಯಾದ ಕಥೆಗಾರ- ಕವಿತೆ

  ಕಥೆಗಾರ ಕವಿಯಾದ- ಹೇಗೆ...? ಕಾರಣ ಅವಳು- ಅವಳೊಂದಿಗಿನ ಮಾತುಕಥೆಯೆಲ್ಲಾ ಸಾಹಿತ್ಯವೇ! ಒಲವಾಯಿತಾ ಅನ್ನುತ್ತಾಳೆ- ಏನೂ ಗೊತ್ತಿಲ್ಲದವಳಂತೆ! ಆಗದಿರಲು ಕಾರಣವನ್ನು ಹುಡುಕುತ್ತಿದ್ದೇನೆ- ಅನ್ನುತ್ತೇನೆ! ಸಿಕ್ಕಿತಾ ಕಾರಣ- ಅನ್ನುತ್ತಾಳೆ! ನೀನಲ್ಲದಿದ್ದರೆ ಪಟ್ಟಿ ಕೊಡುತ್ತಿದ್ದೆ- ಅನ್ನುತ್ತೇನೆ! ಗೊಂದಲಗೊಳ್ಳುತ್ತಾಳೆ! ಮಾತಾಡು- ಅನ್ನುತ್ತೇನೆ! ಯಾಕೆ- ಅನ್ನುತ್ತಾಳೆ! ನೀನನ್ನ ಪ್ರತಿದಿನದ ಕವಿತೆ- ಅನ್ನುತ್ತೇನೆ! ಕಥೆಗಾರ ನೀನು- ಅನ್ನುತ್ತಾಳೆ! ಅರಾಧಿಸುತ್ತಿದ್ದೇನೆ, ಒಲವನ್ನೂ ಮೀರಿ..., ಪ್ರೇಮಿಸುತ್ತಿದ್ದೇನೆ ನಿನ್ನನ್ನು- ಅನ್ನುತ್ತೇನೆ!!!

ಅವಳೆಂಬ ಸಾವು

  ಎರಡು ಸಾಲಿನ ಕಥೆ ಹೇಳು ಅಂದಳು. ನೀನೊಂದು ಮುಗಿಯದ ಕಾದಂಬರಿ ಎಂದೆ. ಕವಿತೆ ಹೇಳು ಅಂದಳು. ನೀನೊಂದು ಮುಗಿಯದ ಮಹಾಕಾವ್ಯ ಎಂದೆ. ಏನಾದರೊಂದು ಹೇಳಿ ಸಾಯಿ ಎಂದಳು. ಐಲವ್‌ಯು ಎಂದೆ- ಸತ್ತೆ

ಪುಸ್ತಕ!

 ಪುಸ್ತಕ! * ಟರೆಸಿನ ಮೇಲೆ ಅಂಗಾತ ಮಲಗಿದ್ದೇವೆ. ಬಲಗೈಯ ಹಸ್ತವನ್ನು ತಲೆಯ ಕೆಳಗಿಟ್ಟು ಮಲಗಿರುವ ನನ್ನ ಎಡ ತೋಳಿನಮೇಲೆ ತಲೆಯಿಟ್ಟು ಅವಳು ಮಲಗಿದ್ದಾಳೆ. ಅವಳ ಎಡ ಕಂಕುಳಿನ ಕೆಳಗಡೆಯಿಂದ ಬಳಸಿದ ನನ್ನ ಕೈ ಅವಳ ಹೊಟ್ಟೆಯ ಮೇಲೆ- ಅವಳ ಎರಡೂ ಕೈಗಳೊಂದಿಗೆ ಸಂಭಾಷಣೆ ನಡೆಸುತ್ತಿದೆ! “ಕಥೆ ಹೇಳ್ತೀಯಾ?” ಎಂದಳು. “ಇಲ್ಲ" ಎಂದೆ. “ಹೇಳು, ಪ್ಲೀಸ್!” ಎಂದಳು. “ಏನು ಹೇಳಲೇ?” ಎಂದೆ. “ಕಥೆ!” ಎಂದಳು. “ನನ್ನ ಪುಸ್ತಕಗಳ ಕಥೆ ಹೇಳಲಾ?” ಎಂದೆ. “ಏನೋ ಒಂದು ಕಥೆ…, ಆ ಕಥೆ ಕೇಳ್ತಾ ಕೇಳ್ತಾ ನಾನು ನಿದ್ದೆ ಮಾಡಬೇಕು!” ಎಂದಳು. “ಹಾಗಿದ್ದರೆ ಈ ಕಥೆಯೇ ಸರಿ!” ಎಂದೆ. * ಬರಹ…, ಹೇಗೆ ನನ್ನ ರಕ್ತದಲ್ಲಿ ಬೆರೆಯಿತೋ ನನಗೆ ತಿಳಿಯದು. ಮುಂಚೆಯಿಂದಲೂ ಕನಸೆಂಬ ಮಾಯಾಲೋಕದಲ್ಲಿ ಬೆಳೆದವನು ನಾನು- ಹೆಚ್ಚು ಸಮಯವನ್ನು ಕಳೆದವನು- ವಿಹರಿಸಿದವನು! ಕನಸುಗಳು ಯಾವತ್ತಿಗೂ ನನ್ನನ್ನು ಕಾಡಿದೆ- ಕಾಪಾಡಿದೆ! ಜೊತೆಗೆ…, ಓದು. ಎಷ್ಟೇ ಓದಿದರೂ ಬರೆಯುವಾಗ- ಯಾರೊಬ್ಬರ ಪ್ರಭಾವ ನನ್ನ ಬರಹದಲ್ಲಿ ಇರಬಾರದೆಂಬ ಹಠ! ಹಾಗೆಯೇ…, ಎಲ್ಲಿ ನಾನು ಬರೆದದ್ದು ಓದುಗರಿಗೆ ಅರ್ಥವಾಗುವುದಿಲ್ಲವೋ ಅನ್ನುವ ಹೆದರಿಕೆಯೂ! ಬರೆದೆ…, ಒಂದು ಕಾಲದಲ್ಲಿ…, ಬರೆದು ಜೋಡಿಸುತ್ತಿದ್ದೆನೆ ಹೊರತು, ಏನು ಮಾಡಬೇಕು ಅನ್ನುವ ಅರಿವೇ ನನಗಿರಲಿಲ್ಲ! ಯಾರೊಬ್ಬರೂ ಓದದೆಯೇ ಅದೆಷ್ಟೋ ವರ್ಷಗಳು ನನ್ನ ಕಥೆಗಳು ಅವಿತುಕೊಂಡಿದ್ದವು. ಕಾಲೇಜ್ ಮ್ಯಾಗಸಿನ್‌ಗಳಲ್ಲಿ ಬಂದಾಗ ಏನೋ ಉತ್ಸಾಹ, ಏನೋ ಸಾಧನೆ ಮಾಡಿದ ಅನು...